ಉತ್ತರಕನ್ನಡ ಜಿಲ್ಲೆಯ ಶಿರಸಿಯ ಅಡೇಮನೆ ನಿವಾಸಿ ಪ್ರಕಾಶ ಕೃಷ್ಣ ಭಟ್‌ ಅವರು ತಮ್ಮ ಎರಡು ಎಕರೆಗೂ ಅಧಿಕ ಪ್ರದೇಶದ ಭೂಮಿಯನ್ನು ಪಕ್ಷಿಗಳ, ಪರಿಸರ ಪ್ರಿಯರ ತಾಣವಾಗಿ ರೂಪಿಸಿದ್ದಾರೆ.

ಆಧುನಿಕತೆಯ ಭರಾಟೆಯ ಇಂದಿನ ದಿನಗಳಲ್ಲಿ ಸ್ವಲ್ಪವೇ ಜಾಗಸಿಕ್ಕಿದರೂ ಸಾಕು, ಅಲ್ಲಿ ಬಹುಮಹಡಿಯ ಕಟ್ಟಡಗಳ್ಳೋ ಅಥವಾ ಕಾರ್ಖಾನೆಯೋ ತಲೆ ಎತ್ತಿ ನಿಲ್ಲುತ್ತವೆ. ಆದರೆ, ಶಿರಸಿಯ ಪ್ರಕಾಶ ಕೃಷ್ಣ ಭಟ್‌ ಅವರ ಆಲೋಚನಾ ಕ್ರಮ ವಿಭಿನ್ನ!

ಹೌದು. ಶಿರಸಿಯ ಅಡೇಮನೆಯಲ್ಲಿ ತಮ್ಮ ಹೆಸರಿನಲ್ಲಿರುವ ಎರಡು ಎಕರೆಗೂ ಅಧಿಕ ವಿಸ್ತಾರವಾದ ಭೂಮಿಯಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವ ಮೂಲಕ ಪಕ್ಷಿಗಳ, ಪರಿಸರ ಪ್ರಿಯರ ತಾಣವಾಗಿ ರೂಪಿಸಿದ್ದು ಇದು ಶಿರಸಿಗರ ಗಮನ ಸೆಳೆಯುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ 350 ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಬೇರೆ ಬೇರೆ ಸ್ಥಳಗಳಿಂದ ಸಸ್ಯ ತಂದು, ಹನಿ ನೀರಾವರಿ ವ್ಯವಸ್ಥೆ ಮಾಡಿ ಅಗತ್ಯ ಗೊಬ್ಬರ ನೀಡಿ ಗಿಡಗಳನ್ನು ಬೆಳೆಸಿದ್ದಾರೆ. ಈ ಪ್ರದೇಶಕ್ಕೆ “ಅಶೋಕ ವನ’ ಎಂದು ಹೆಸರಿಟ್ಟಿದ್ದಾರೆ. 8 ವರ್ಷಗಳ ಪರಿಶ್ರಮದ ಫ‌ಲವಾಗಿ ಇಂದು ಅಶೋಕವನ ಎಲ್ಲರನ್ನೂ ಆಕರ್ಷಿಸುತ್ತಿದೆ.

ನಾಲ್ಕು ಹಂತದ ಸಸ್ಯಗಳು:ಪ್ರಕಾಶ ಭಟ್ಟರ “ಅಶೋಕ ವನ’ದಲ್ಲಿ ನಾಲ್ಕುಹಂತದ ಸಸ್ಯಗಳನ್ನು ಕಾಣಬಹುದು. 
ಗಡ್ಡೆಯ ಮಾದರಿ: ಅರಿಶಿನ, ಶುಂಠಿ, ಶತಾವರಿ ಮತ್ತಿತರ ಸಸ್ಯಗಳು
ಕುಬ್ಜ ಜಾತಿಯ ಸಸ್ಯಗಳು:ಏಲಕ್ಕಿ, ನೆಲ ನೆಲ್ಲಿ, ಬಳ್ಳಿ ಅರಿಶಿಣ, ಗಳಂಗ ಮುಂತಾದವು.
ಆರರಿಂದ ಏಳು ಅಡಿ ಎತ್ತರ ಬೆಳೆಯುವ ಔಷಧೀಯ ಸಸ್ಯಗಳು:  ಕೋಕಂ, ದಾಲಿcನ್ನಿ, ಲವಂಗ
ಎತ್ತರ ಬೆಳೆಯುವ ಔಷಧೀಯ ಸಸ್ಯಗಳು: ಅಗರವುಡ್‌, ಅಶೋಕ, ನೇರಳೆ ಮುಂತಾದವು.

ಈ ವನದಲ್ಲಿನ ಪ್ರತಿಯೊಂದು ದೊಡ್ಡ, ಸಣ್ಣ ಮರಗಳಿಗೆ ಕಾಳುಮೆಣಸಿನ ಬಳ್ಳಿಯನ್ನೂ ಹಬ್ಬಿಸಿದ್ದಾರೆ. ಬೇಸಿಗೆಯ ಸಮಯದಲ್ಲಿನೀರಿಲ್ಲದಿದ್ದರೂ ಬದುಕುವ ಕೆಲವು ವಿಶೇಷ ಸಸ್ಯಗಳನ್ನೂಬೆಳೆಸಿರುವುದು ವಿಶೇಷ! ವನದಲ್ಲಿ ಶತಾವರಿ, ದೊಡ್ಡ ನೇರಳೆ,ದಾಲ್ಚಿನ್ನಿ, ಬಜೆ, ಶುಂಠಿ, ಅಂಬೆಕೊಂಬು, ನೆಲ ನೆಲ್ಲಿ, ಅಶೋಕ ಮುಂತಾದ ಸಸ್ಯಗಳಿವೆ. ಅಶೋಕ ವನದಲ್ಲಿ ನವಗ್ರಹವನವೂ ಇದೆ. ಮಾಹಿತಿಗಾಗಿ ಯಾರೇ ಇಲ್ಲಿಗೆ ಭೇಟಿನೀಡಿದರೂ ಭಟ್ಟರು ಪ್ರೀತಿಯಿಂದ ವಿವರಣೆ ನೀಡುತ್ತಾರೆ.

ಯೋಗವನ ನಿರ್ಮಾಣದ ಕನಸು:
ಒಂದು ಆರೋಗ್ಯದಾಯಕ, ಸಂಪ್ರದಾಯ, ಸಂಸ್ಕೃತಿಗೆ ಅನುಗುಣವಾಗಿ ವ್ಯವಸ್ಥಿತವಾದ ಯೋಗ ವನ ನಿರ್ಮಿಸಬೇಕೆಂಬ ಕನಸು ಹೊಂದಿದ್ದಾರೆ ಪ್ರಕಾಶ ಭಟ್‌. ಔಷಧೀಯ ಕೃಷಿ ಮಾಹಿತಿಗಾಗಿ ಅವರನ್ನು 9481651332 ನಲ್ಲಿ ಸಂಪರ್ಕಿಸಬಹುದು.

– ಎಂ.ಎಸ್ .ಶೋಭಿತ್‌, ಮೂಡ್ಕಣಿ